ಮನುಷ್ಯನಿಗೆ ತನ್ನದೇ ಆದಂಥ ಒಂದು ನೆಲೆ ಇರಬೇಕು. ಆದರೆ ವ್ಯವಸ್ಥೆ ಆ ನೆಲೆಯನ್ನೇ ಕಸಿದುಕೊಳ್ಳಲು ಹೋದರೆ ಆ ವ್ಯಕ್ತಿಯ ಪರಿಸ್ಥಿತಿ ಏನಾಗಿರಬೇಡ, ಇದನ್ನೇ ಸಾಹಿತಿ ಫಕೀರ್ ಮೊಹಮ್ಮದ್ ಕಟ್ಟಾಡಿ ಅವರು ತಮ್ಮ ’ನೋಂಬು’ ಎನ್ನುವ ಕಥೆಯಲ್ಲಿ ಹೇಳಿರುವುದು. ರಂಜಾನ್ ಆ ವ್ಯವಸ್ಥೆಗೆ ಸಿಕ್ಮು ನಲುಗಿದವರ ಪ್ರತಿನಿಧಿಯಾಗಿ ಅದೇ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಟ್ಟೆಪಾಡು ಗ್ರಾಮದಲ್ಲಿ ಹಳೇ ಪೇಪರ್ ಸಂಗ್ರಹಿಸಿ, ಅದನ್ನು ಮಾರಿ ಬಂದ ಹಣದಲ್ಲಿ ಜೀವನ ಸಾಗಿಸುವ ರಂಜಾನ್ (ಸಂಗಮೇಶ ಉಪಾಸೆ), ಮನೆಯಲ್ಲಿ ಬೀಡಿಕಟ್ಟುತ್ತ ಗಂಡನಿಗೆ ಸಹಕಾರಿಯಾಗಿರುವ ಹಲೀಮಾ (ಪ್ರೇಮಾವತಿ ಉಪಾಸೆ) ದಂಪತಿಗೆ ಅದ್ದು, ಅಮೀನಾ ಎಂಬಿಬ್ಬರು ಮುದ್ದಾದ ಮಕ್ಕಳು, ಪ್ರಗತಿಯ ನೆಪದಲ್ಲಿ ಕಾರ್ಖಾನೆ ಕಟ್ಟಲು ಆ ಊರಿನ ಒಂದಷ್ಟು ಮನೆ, ಜಮೀನನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗುತ್ತದೆ. ಆ ಪಟ್ಟಿಯಲ್ಲಿ ರಂಜಾನ್ ಮನೆಯೂ ಇರುತ್ತದೆ. ಜೀವನ ಸಾಗಿಸುವುದೇ ಕಷ್ಟಕರವಾಗಿರುವ ರಂಜಾನ್ ಇರುವ ಮನೆಯನ್ನೂ ಕಳೆದುಕೊಂಡು ಹೇಗುವುದೆಲ್ಲಿ ಎಂದು ಮನೆಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರನ್ನು ಒಟ್ಟುಗೂಡಿಸಿಕೊಂಡು ಸತತ ಹೋರಾಟ ನಡೆಸುತ್ತಾನೆ.ಇದಕ್ಕೆ ಮಣಿಯದ ಸರ್ಕಾರ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತದೆ. ಮುಸ್ಲಿಂ ಎನ್ನುವ ಕಾರಣಕ್ಕೆ ರಂಜಾನ್ ಗೆ ಯಾರೂ ಮನೆ ಬಾಡಿಗೆ ಕೊಡುವುದಿಲ್ಲ, ಕೆಲವರು ಕೇಳುವಷ್ಟು ಬಾಡಿಗೆ ನಿಡಲು ರಂಜಾನ್ ಶಕ್ತನಿರುವುದಿಲ್ಲ. ಹೀಗೆ ಸಂದರ್ಭದ ಸುಳಿಗೆ ಸಿಕ್ಕು ನಲುಗಿದ ರಂಜಾನ್ ಕೊನೆಗೆ ಆ ಊರನ್ನೇ ಕಾಲಿ ಮಾಡಬೇಕಾಗುತ್ತದೆ. ಸರ್ವ ಧರ್ಮದವರನ್ನು ಸೇರಿಸಿಕೊಂಡು ಫಲವತ್ತು ಭೂಮಿ ಹಿತರಕ್ಷಣಾ ಸಮಿತಿ ಮೂಲಕ ಹೋರಾಟ ನಡೆಸುವ ರಂಜಾನ್ ಹೋರಾಟ ಕೊನೆಗೂ ಫಲಪ್ರದವಾಗುವುದಿಲ್ಲ.
ಮನಮಿಡಿಯುವ ಕಥೆಯೊಂದನ್ನು ನಿರ್ದೇಶಕ ಪಂಚಾಕ್ಷರಿ ಅವರು ಭಾವನಾತ್ಮಕವಾಗಿ ನಿರೂಪಿಸಿದ್ದಾರೆ. ಮುಸ್ಲಿಂ ಸಮುದಾಯದ ಆಚರಣೆಗಳಾದ ಕಲ್ಮಾ, ರೋಜಾ, ನಮಾಜ್, ಜಕಾತ್ ಇದನ್ನೆಲ್ಲ ಕಥೆಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಉಳ್ಳವರು ಮತ್ತು ಇಲ್ಲದವರ ಬದುಕು ಹೇಗಿರುತ್ತದೆ. ಬಡತನದಲ್ಲಿದ್ದರೂ ಸುಖ ಜೀವನ ನಡೆಸುವ ಕುಟುಂಬ, ಎಲ್ಲವೂ ಇದ್ದರೂ ನೆಮ್ಮದಿ ಕಾಣದ ದಂಪತಿಗಳು. ಇದರ ಜೊತೆಗೆ ಭೂಸ್ವಾದೀನ ಪ್ರಕ್ರಿಯೆಯ ಕೆಲವು ನ್ಯೂನತೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ನಾಯಕ ಸಂಗಮೇಶ ಉಪಾಸೆ ರಂಜಾನ್ ಪಾತ್ರದಲ್ಲಿ ಪ್ರಬುದ್ದ ಅಭಿನಯ ನೀಡಿದ್ದಾರೆ. ಅವರ ಪತ್ನಿ ಪ್ರೇಮಾವತಿ ಮುಸ್ಲಿಂ ಮಹಿಳೆಯಾಗಿ ನೈಜ ಅಭಿನಯ ನೀಡಿದ್ದಾರೆ. ಕೆ.ಎಂ.ಇಂದ್ರ ಸಂಗೀತದ ಎಲ್ಲಾ ಹಾಡುಗಳು ಸೊಗಸಾಗಿ ಮೂಡಿಬಂದಿವೆ. ಜೀವ ಕೊಟ್ಟ ಅಲ್ಲಾ ಜೀವನ ಕೊಟ್ಟಯಲ್ಲ, ಹೋರಾಟವೇ ಜೀವನ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಶೀರ್ಷಿಕೆ ಒಂದು ಧರ್ಮಕ್ಕೆ ಸೀಮಿತವಾಗಿದ್ದರೂ, ಕಥೆಯ ತಿರುಳು ಎಲ್ಲರಿಗೂ ಅನ್ವಯಿಸುತ್ತದೆ.